ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 39
ಉಪನಿಷತ್ತುಗಳಲ್ಲಿ – ಬ್ರಹ್ಮ, ವಿಷ್ಣು, ಮಹೇಶ್ವರ ಎಂಬ ಮೂರ್ತಿಗಳ ಚಿತ್ರಣ
(ದಿ. 1-12-1991 ಧರ್ಮಪ್ರಭ ಸಂಚಿಕೆಯಲ್ಲಿ ಪ್ರಕಟವಾದ ಒದುಗರಪತ್ರಗಳಿಗೆ ದಿ.ಲಂಕಾ ಕೃಷ್ಣಮೂರ್ತಿಯವರು ಕೊಟ್ಟ ಉತ್ತರದ ಲೇಖನ)
ಪ್ರಶ್ನೆ:- ತಮ್ಮ ನವೆಂಬರ್ ಸಂಚಿಕೆಯಲ್ಲಿ ಉತ್ತರ ಕೊಡುವಾಗ ವೇದಗಳ ಜೊತೆಗೆ ಪುರಾಣವಾಜ್ಮಯಗಳೆಲ್ಲವೂ ಆರ್ಷವೇ ಎಂಬುದಾಗಿ ತಿಳಿಸಿರುತ್ತೀರಿ. ಪುರಾಣಗಳಲ್ಲಿ ಬ್ರಹ್ಮ, ವಿಷ್ಣು, ಮಹೇಶ್ವರ ಎಂಬ ಮೂರ್ತಿಗಳು ಚಿತ್ರಿತವಾಗಿವೆ. ಇವು ಉಪನಿಷತ್ತುಗಳಲ್ಲಿ ಎಲ್ಲಿ ಚಿತ್ರಿತವಾಗಿವೆ ಎಂಬುದನ್ನು ತಾವು ದಯವಿಟ್ಟು ತಿಳಿಸಬೇಕೆಂದು ಪ್ರಾರ್ಥಿಸುತ್ತೇನೆ.
ಉತ್ತರ:- ಶ್ವೇತಾಶ್ವತರೋಪನಿಷತ್ತಿನ ಕೆಳಕಂಡ ಮಂತ್ರದಲ್ಲಿ ಸೃಷ್ಟಿ, ಸ್ಥಿತಿ ಲಯಗಳ ವಿಷಯ ಬಂದಿರುತ್ತದೆ.
ಏ ಕೋಹಿ ರುದ್ರೋ ನದ್ವಿತೀಯಾಯ ತಸ್ಥುಃ
ಯ ಇಮಾನ್ ಲೋಕಾನೀಶತ ಈ ಶನೀಭಿಃ
ಪ್ರತ್ಯಜ್ಞ್ ಜನಾಂಸ್ತಿಷ್ಠತಿ ಸಂಚುಕೋಚಾಂತಕಾಲೇ
ಸಂಸೃಜ್ಯ ವಿಶ್ವಾ ಭುವನಾನಿ ಗೋಪಾಃ
ರುದ್ರನೊಬ್ಬನೇ ಬೇರೆ ಯಾರ ಅಪೇಕ್ಷೆಯು ಇಲ್ಲದೆ ತನ್ನ(ಬ್ರಹ್ಮಾದಿ) ಶಕ್ತಿಗಳ ಮೂಲಕ ಈ ಲೋಕಗಳನ್ನು ನಿಯಮಿಸುತ್ತಿದ್ದಾನೆ. ಆತನು ಸಮಸ್ತ ಜೀವಿಗಳೊಳಗೆ ಇದ್ದು ಸಮಸ್ತ ಲೋಕಗಳನ್ನೂ ಸೃಷ್ಟಿ ಮಾಡಿ ಸಂರಕ್ಷಣೆ ಮಾಡಿ ಪ್ರಳಯ ಕಾಲದಲ್ಲಿ ಸಂಕೋಚ ಮಾಡುತ್ತಾನೆ.
ಇದರಿಂದ, ಒಬ್ಬನೇ ಪರಮಾತ್ಮನ ಮೂರು ವಿಧವಾದ ಶಕ್ತಿಗಳು ಸೃಷ್ಟಿ ಸ್ಥಿತಿ ಲಯಗಳನ್ನು ಮಾಡುತ್ತಿವೆ ಎಂಬುದು ತಿಳಿದು ಬರುತ್ತದೆ.
ಅದೇ ಉಪನಿಷತ್ತಿನ “ತೇ ಧ್ಯಾನ ಯೋಗಾನುಗತಾ ಆಪಷ್ಯನ್” ಎಂಬ ಮಂತ್ರದ ಭಾಷ್ಯದಲ್ಲಿ ಶ್ರೀ ಶಂಕರಾಚಾರ್ಯರು “ಶಕ್ತಯೋಯ ಸ್ಯ ದೇವಸ್ಯ ಬ್ರಹ್ಮ, ವಿಷ್ಣು, ಶಿವಾತ್ಮಿಕಾಃ” ಎಂಬ ಶ್ಲೋಕವನ್ನು ಆಧಾರವಾಗಿ ಇಟ್ಟುಕೊಂಡು ಮೇಲ್ಕಂಡ ಮಂತ್ರಗಳಿಂದ ತಿಳಿಯಬೇಕಾದ ಶಕ್ತಿಗಳು ಬ್ರಹ್ಮ, ವಿಷ್ಣು, ಶಿವ ಎಂಬ ತ್ರಿಮೂರ್ತಿಗಳ ಶಕ್ತಿಗಳು ಎಂದು ವಿವರಿಸುತ್ತಾರೆ.
ಅದೇ ಶ್ವೇತಾಶ್ವತರೋಪನಿಷತ್ತಿನ “ಅಜಾಮೇಕಾಂ ಲೋಹಿತ ಶುಕ್ಲ ಕೃಷ್ಣಾಂ” ಎಂಬ ಮಂತ್ರದಲ್ಲಿ ಕೆಂಪು ಬಿಳುಪು ಮತ್ತು ಕಪ್ಪು ಎಂಬ ವರ್ಣಗಳನ್ನು ಸಾಂಕೇತಿಕವಾಗಿ ಬಳಸಲಾಗಿದೆ. ಉಪನಿಷತ್ತುಗಳಲ್ಲಿ ಎಲ್ಲೋ ಒಂದು ಕಡೆ ಸಂಕೇತಗಳು ಬಂದರೆ ಪುರಾಣಗಳಲ್ಲಿ ಅವುಗಳು ತುಂಬಿಕೊಂಡಿವೆ. ಉಪನಿಷತ್ತುಗಳಲ್ಲಿ ಸೂಚಿತವಾಗಿರುವ ಸೃಷ್ಟಿ ಸ್ಥಿತಿ ಲಯಕಾರ ಶಕ್ತಿಗಳಿಗೆ ಬಣ್ಣ ಮುಂತಾದ ಸಂಕೇತಗಳನ್ನು ಸೇರಿಸಿ ಪುರಾಣಗಳು ತ್ರಿಮೂರ್ತಿಗಳ ಸ್ವರೂಪವನ್ನು ಪೂರ್ಣಮಾಡಿವೆ ಎಂದು ನನ್ನ ಅಲ್ಪ ಮತಿಗೆ ತೋರುತ್ತದೆ.
– ಲಂಕಾ ಕೃಷ್ಣಮೂರ್ತಿ