Article of the Month January 2019
ಹಿಂದಿನ ಸಂಚಿಕೆಯಿಂದ ಮುಂದುವರಿಯುತ್ತಿದೆ )
ಧರ್ಮದ ಬೀಜಾಕ್ಷರಗಳು
–ಲಂಕಾ ಕೃಷ್ಣ ಮೂರ್ತಿ
ದಯೆ
ತನ್ನಂತೆ ಇತರ ಪ್ರಾಣಿಗಳು ಎಂಬ ಜ್ಞಾನವೇ ದಯೆಗೆ ಪ್ರೇರಕ. ಇತರರ ನೋವನ್ನು ನೋಡಿದಾಗ ತನಗೆ ನೋವಾದಂತೆ ಯಾರಿಗೆ ಆಗುವುದೋ ಅವರಲ್ಲಿಯೇ ದಯೆ ಬರುವುದು. “ಆತ್ಮವತ್ಸರ್ಪಭೂತಾನಿ ಯಃ ಪಶ್ಯತಿ ಸಪಶ್ಯತಿ” ಅಂದರೆ ತನ್ನಂತೆ ಇತರ ಸಮಸ್ತಪ್ರಾಣಿಗಳನ್ನೂ ಯಾರು ಭಾವಿಸುತ್ತಾರೋ ಅವರೇ ಜ್ಞಾನಿಗಳು ಎಂದು ಅರ್ಥ. ದಯೆಯಿಲ್ಲದೆ ಇರುವವರು ಜ್ಞಾನಿಗಳಲ್ಲ. ಭಗವದ್ಭಕ್ತರೂ ಅಲ್ಲ. ಯೋಗಿಗಳೂ ಅಲ್ಲ. ಭಕ್ತಿರಸಭರಿತವಾದ ಭಾಗವತ ಪುರಾಣದ ಆದಿಯಲ್ಲಿಯೇ ಬರುವ ದ್ರೌಪದಿಯ ಪಾತ್ರಚಿತ್ರಣವು ಎಲ್ಲರೂ ಮೊದಲು ಗಮನಿಸತಕ್ಕದ್ದು.
ದ್ರೌಪದಿಯ ಐದು ಜನ ಪುತ್ರರು ನಿದ್ರಿಸುತ್ತಿದ್ದಾಗ ಅಶ್ವತ್ಠಾಮನು ಬಂದು ಅವರನ್ನು ಕೊಂದ ಕಥೆ ಎಲ್ಲರಿಗೂ ಗೊತ್ತಿದೆ. ಅಂತಹ ಪಾಪಿಯನ್ನು ಅರ್ಜುನನು ಹಿಡಿದು ತಂದು ದ್ರೌಪದಿಯ ಮುಂದೆ ನಿಲ್ಲಿಸುತ್ತಾನೆ. ಇವನು ಮಾಡಿದ ಪಾಪಕ್ಕೆ ಮತ್ತು ಅಪಕಾರಕ್ಕೆ ಅವನನ್ನು ಕೊಲ್ಲುವುದೇ ಸರಿ ಎಂದು ಗಂಡಸರು ಹೇಳುತ್ತಿರುವಾಗ ಹೆಂಗಸಾದ ದ್ರೌಪದಿ ಅವನ ಸ್ಥಿತಿಯನ್ನು ನೋಡಿ ದಯಾಮಯಳಾದ ಸನ್ನಿವೇಶವು ಧರ್ಮಗ್ರಂಥಗಳಲ್ಲಿಯೇ ಮೇಲ್ಪಂಕ್ತಿಯಾಗಿರುತ್ತದೆ. ತನ್ನ ಮಕ್ಕಳನ್ನು ಕಳೆದುಕೊಂಡು ತಾನು ದುಃಖಿಸುತ್ತಿದ್ದರೂ, ಅವರನ್ನು ಅನ್ಯಾಯದಿಂದ ಕೊಂದ ಪಾಪಿಯು ಎದುರಿಗೆ ಬಂದು ನಿಂತಿದ್ದರೂ ದ್ರೌಪದಿಯ ಮನಸ್ಸಿನಲ್ಲಿ ಹುಟ್ಟಿದ ಭಾವವೆಂತಹುದು. ಪುತ್ರ ಶೋಕವೆಂದರೆ ಭರಿಸುವುದು ಎಷ್ಟು ಕಷ್ಟವೆಂಬುದು ನನಗೆ ಈಗ ಅನುಭವಕ್ಕೆ ಬಂದಿದೆ. ಈ ಅಶ್ವತ್ಥಾಮನನ್ನು ಕೊಂದರೆ ಈತನ ತಾಯಿಗೆ ಇದೇ ರೀತಿಯ ಪುತ್ರ ಶೋಕವುಂಟಾಗಿ ಆಕೆ ಆಕೆಯು ಎಷ್ಟು ಬಾಧೆ ಪಡುವಳೋ? ನನಗೆ ಗಂಡಂದಿರಾದರೂ ಬದುಕಿದ್ದಾರೆ. ಆಕೆಯ ಗಂಡನಾದ ದ್ರೋಣನೂ ಯುದ್ಧದಲ್ಲಿ ಮಡಿದ ಗಂಡನನ್ನು ಕಳೆದುಕೊಂಡು ಪರಿತಪಿಸುತ್ತಿರುವ ಕೃಪಿಗೆ ಪುತ್ರಶೋಕವು ಬೇರೆ ಉಂಟಾದರೆ ಎಷ್ಟು ಪರಿತಪಿಸುವಳೋ! ನನ್ನಂತಯೇಅಲ್ಲವೇ ಆಕೆಯ ಆತ್ಮವೂ ಸಹ. ಎಂಬ ದಯಾರಸಪೂರ್ಣವಾದ ಭಾವನೆಗಳು ದ್ರೌಪದಿಯ ಮನಸ್ಸಿನಲ್ಲಿ ಉದ್ಭವಿಸಿದವು. ಆಕೆಯು ಅಶ್ವತ್ಥಾಮನನ್ನು ಬಿಡಿಸಿ ಬುದ್ಧಿ ಹೇಳಿ ಕಳುಹಿಸುವಳು. ಧರ್ಮಮೂರ್ತಿಯಾದ ಧರ್ಮರಾಯನೂ ಪರಮಾತ್ಮನಾದ ಶ್ರೀಕೃಷ್ಣನು ದ್ರೌಪದಿಯ ಈ ದಯಾಗುಣವನ್ನು ಬಹಳ ಮೆಚ್ಚುವರು.
ದ್ವೇಷಾಗ್ನಿಗಳು ಹುಟ್ಟಿದಂತೆ ತಡೆಗಟ್ಟಬಲ್ಲದು ದಯಾ ಗುಣವೊಂದೇ. ಪ್ರಜ್ವಲಿಸುವ ದ್ವೇಷಾಗ್ನಿಗಳನ್ನು ತಣ್ಣಗೆ ಮಾಡುವ ಶಕ್ತಿ ದಯಾಗುಣಕ್ಕಲ್ಲದೆ ಬೇರೆ ಯಾವುದಕ್ಕೂ ಇಲ್ಲ. ದಯಾಗುಣದ ಅಮೃತ ಸ್ಪರ್ಶದಿಂದ ರಾಕ್ಷಸರನ್ನು ದೇವತೆಗಳನ್ನಾಗಿ ಬದಲಾಯಿಸಲು ಸಾಧ್ಯ. ದಯಾಗುಣಕ್ಕೆ ಹೃದಯವಿರುವ ಸಮಸ್ತ ಪ್ರಾಣಿಗಳೂ ಅಧಿಕಾರಿಗಳು. ಸ್ತ್ರೀ, ಪುರುಷ, ಜಾತಿ, ಮತ, ಮನುಷ್ಯ, ಪಶು, ಪಕ್ಷಿ, ಇತ್ಯಾದಿ ಯಾವ ಭೇದವೂ ಇಲ್ಲ. ಯಾವ ಹೃದಯದಲ್ಲಿ ದಯೆ ಎಂಬ ಅಮೃತವಿರುವುದೋ ಅದೇ ದಿವ್ಯವಾದ ಹೃದಯ.
(ಮುಂದಿನ ಸಂಚಿಕೆಯಲ್ಲಿ ಮುಂದುವರೆಯುತ್ತದೆ)