Article of the Month February 2019
(ಹಿಂದಿನ ಸಂಚಿಕೆಯಿಂದ ಮುಂದುವರಿಯುತ್ತಿದೆ )
ಧರ್ಮದ ಬೀಜಾಕ್ಷರಗಳು
–ಲಂಕಾ ಕೃಷ್ಣ ಮೂರ್ತಿ
ದಯೆ
ಮಹಾಭಾರತದಲ್ಲಿ ಬರುವ ಪಾರಿವಾಳದ ಕಥೆ ಈ ವಿಷಯಕ್ಕೆ ನಿದರ್ಶನವಾಗಿದೆ. ಒಬ್ಬ ಬೇಡನು ಹಕ್ಕಿಗಳನ್ನು ಬಲೆಯಲ್ಲಿ ಹಿಡಿಯುತ್ತಿರುತ್ತಾನೆ. ಸಾಯಂಕಾಲವಾಗಿ ಕತ್ತಲು ಕವಿದಾಗ ಜೋರಾದ ಮಳೆ ಬರುತ್ತದೆ. ಅವನು ಒಂದು ದೊಡ್ಡ ಮರದ ಕೆಳಗಿನ ಬಂಡೆಯ ಮೇಲೆ ಕುಳಿತುಕೊಳ್ಳುತ್ತಾನೆ. ಎಷ್ಟು ಹೊತ್ತಾದರೂ ಮಳೆ ಬಿಡಲಿಲ್ಲ. ಚಳಿಯಿಂದ ಗಡಗಡ ನಡಗುತ್ತಿರುತ್ತಾನೆ. ಆ ಮರದ ಪೊಟರೆಯಲ್ಲಿ ಪಾರಿವಾಳ ದಂಪತಿಗಳು ವಾಸವಾಗಿರುತ್ತವೆ. ಹೆಣ್ಣು ಪಾರಿವಾಳ ಈ ಬೇಡನ ಬಲೆಯಲ್ಲಿ ಬಿದ್ದಿರುತ್ತದೆ. ಗಂಡು ಪಾರಿವಾಳ ಹೆಣ್ಣು ಪಾರಿವಾಳದ ಸ್ಥಿತಿಯನ್ನು ನೋಡಿ ಏನೂ ಮಾಡಲಾರದೆ ದುಃಖಿಸುತ್ತಿರುತ್ತದೆ. ಆಗ ಆ ಹೆಣ್ಣು ಪಾರಿವಾಳ ತನ್ನ ಗಂಡನಿಗೆ- “ ಈ ಬೇಡನು ನಮ್ಮ ಮನೆಗೆ ಬಂದಿದ್ದಾನೆ. ಚಳಿಯಿಂದ ಈತನ ಪ್ರಾಣ ಹೋಗುತ್ತಿದೆ. ಈತನನ್ನು ಕಾಪಾಡುವುದು ನಮ್ಮ ಧರ್ಮ” ಎಂದು ಹೇಳುತ್ತದೆ. ಆ ಪಕ್ಷಿಯ ಹೃದಯ ಕರಗುತ್ತದೆ. ಮಳೆ ನಿಂತ ಕೂಡಲೆ ಒಣಗಿದ ಕಡ್ಡಿಗಳನ್ನು ಆ ಬೇಡನ ಮುಂದೆ ಗುಡ್ಡೆಹಾಕಿ ಹತ್ತಿರದ ಹಳ್ಳಿಗೆ ಹಾರಿ ಹೋಗಿ ಅಲ್ಲಿ ಬೆಂಕಿಯಿದ್ದ ಕಡೆಯಿಂದ ಒಂದು ಕೊಳ್ಳಿಯನ್ನು ಕೊಕ್ಕಿನಿಂದ ತಂದು ಹಾಕಿ ತನ್ನ ರೆಕ್ಕೆಗಳನ್ನು ಬೀಸಿ ಬೆಂಕಿ ಉರಿಯುವಂತೆ ಮಾಡುತ್ತದೆ. ಅದರಿಂದ ತನ್ನ ಮೈಯನ್ನು ಬೆಚ್ಚಗೆ ಮಾಡಿಕೊಂಡ ಬೇಡನನ್ನು ಆ ಪಾರಿವಾಳ ಈಗ ಸುಖವಾಗಿದ್ದೀಯೇ ಎಂದು ಕೇಳುತ್ತದೆ. ಆತ ಹಸಿವಿನಿಂದ ಪ್ರಾಣ ಬಿಡಲಿರುವನೆಂದು ಹೇಳಿದಾಗ ಆತನ ಪ್ರಾಣವನ್ನುಳಿಸಲು ಆ ಗಂಡು ಪಾರಿವಾಳವು “ ನಾವು ಮನುಷ್ಯರಂತೆ ಧಾನ್ಯವನ್ನು ಇಟ್ಟುಕೊಂಡಿರುವರಲ್ಲ. ನನ್ನ ಶರೀರವನ್ನೇ ತಿನ್ನು” ಎಂದು ಹೇಳಿ ತಾನು ಆ ಬೆಂಕಿಯೊಳಕ್ಕೆ ಬೀಳುತ್ತದೆ. ಈ ಮಹಾತ್ಯಾಗಕ್ಕೆ ಚಕಿತನಾದ ಬೇಡನಿಗೆ ತಾನು ಪಾಪಿಯೆಂಬ ಅರಿವುಂಟಾಗುತ್ತದೆ. ಬಲೆಯಲ್ಲಿನ ಹಕ್ಕಿಗಳನ್ನೆಲ್ಲಾ ಬಿಟ್ಟುಬಿಡುತ್ತಾನೆ. ಹೆಣ್ಣು ಪಾರಿವಾಳ ಸಹಗಮನ ಮಾಡುತ್ತದೆ. ಆ ಎರಡು ಪಾರಿವಾಳಗಳನ್ನು ದೇವದೂತರು ವಿಮಾನದಲ್ಲಿ ಸ್ವರ್ಗಕ್ಕೆ ಕರೆದುಕೊಂಡು ಹೋಗುವುದನ್ನು ಬೇಡನು ನೋಡುತ್ತಾನೆ. ಆತನು ಮಹಾಪ್ರಸ್ಥಾನ ಮಾಡುತ್ತಾನೆ. ಕಾಡುಕಿಚ್ಚಿನಲ್ಲಿ ಹೊಕ್ಕಾಗ ಆತನ ಭೌತಿಕ ಶರೀರವು ಹೋಗಿ ಆತನು ದಿವ್ಯಪುರುಷನಾಗಿ ವಿಮಾನದಲ್ಲಿ ಸ್ವರ್ಗಕ್ಕೆ ಹೋಗುತ್ತಾನೆ.
(ಮುಂದಿನ ಸಂಚಿಕೆಯಲ್ಲಿ ಮುಂದುವರೆಯುತ್ತದೆ)