ನಿತ್ಯ ಆಧ್ಯಾತ್ಮಿಕೋಪನ್ಯಾಸ ಮಹಾಯಜ್ಞ: ಮನುಧರ್ಮ ಶಾಸ್ತ್ರ
ರಚನೆ: ದಿII ಲಂಕಾ ಕೃಷ್ಣಮೂರ್ತಿ
(ದಿನಾಂಕ 1-11-1997 ಧರ್ಮಪ್ರಭ ಮಾಸ ಪತ್ರಿಕೆಯಲ್ಲಿ ಪ್ರಕಟಿಸಲಾಗಿದ್ದ ಲೇಖನ)
ನಾವಿಂದು ವಿಜ್ಞಾನಯುಗದಲ್ಲಿದ್ದೇವೆ. ವಿಜ್ಞಾನಿಗಳು ಪ್ರಕೃತಿಯಲ್ಲಿನ ಅನೇಕ ರಹಸ್ಯಗಳನ್ನು ಕಂಡುಹಿಡಿದಿದ್ದಾರೆ. ತತ್ಪರಿಣಾಮವಾಗಿ ನಾವು ಅನೇಕ ಯಂತ್ರಗಳು ಮತ್ತು ನವೀನ ವಸ್ತುಗಳ ರೂಪದಲ್ಲಿ ಪ್ರಾಕೃತಿಕ ಸಂಪತ್ತನ್ನು ಹೆಚ್ಚಾಗಿ ಉಪಯೋಗಿಸುತ್ತಿದ್ದೇವೆ. ಮನುಷ್ಯನ ಜೀವಿತಾವಧಿ ಹೆಚ್ಚಾಗಿದೆ. ಆದರೆ ಮನುಷ್ಯರ ಮಧ್ಯೆ ಪರಸ್ಪರ ಸಂಬಂಧಗಳ ವಿಷಯವಾಗಿ ವಿಜ್ಞಾನವು ಮುಂದುವರೆದಿಲ್ಲ. ಈ ಕ್ಷೇತ್ರದಲ್ಲಿ ಬೇರೆ ಬೇರೆ ದೇಶಗಳ ಪ್ರಜೆಗಳಲ್ಲಿ ಅಗ್ರಗಣ್ಯರಾದವರು ತಮಗೆ ತೋಚಿದ ರೀತಿಯಲ್ಲಿ ಮನುಷ್ಯ ಜಾತಿಯನ್ನು ನಡೆಸುತ್ತಿದ್ದಾರೆ. “ಯದ್ಯದಾಚರತಿ ಶ್ರೇಷ್ಠಃ ತತ್ರ ದೇವೇತರೋಜನಃ! ಸಯತ್ಪ್ರಮಾಣಂ ಕುರುತೇ ಲೋಕಸ್ತದನುವರ್ತತೇ!” ಎಂಬುದು ನಿತ್ಯ ಸತ್ಯವು. ಈ ಅಗ್ರಗಣ್ಯರು, ಅವರನ್ನನುಸರಿಸುವವರು, ಈ ರೂಪದಲ್ಲಿರುವ ಜನಸಮುದಾಯವನ್ನು ನಾಲ್ಕು ವಿಧವಾಗಿ ವಿಭಜಿಸಬಹುದು.
1) ತಮ್ಮ ಬುದ್ಧಿಶಕ್ತಿಯಿಂದ ಜನರಲ್ಲಿ ಆಚಾರವ್ಯವಹಾರಕ್ಕೆ ಸಂಬಂಧಿಸಿದ ಭಾವಗಳನ್ನು ನಿರ್ಣಯಿಸಿ ವಾಕ್ ಶಕ್ತಿಯಿಂದ ಅದನ್ನು ಪ್ರಚಾರ ಮಾಡುತ್ತಾ ಜನರನ್ನು ಒಂದು ಹಾದಿಯಲ್ಲಿ ನಡೆಸುವವರು. ಇವರನ್ನು ಶಿಕ್ಷಕರೆನ್ನಬಹುದು.
2) ತಮ್ಮ ಧೈರ್ಯಸಾಹಸಗಳಿಂದ, ತ್ಯಾಗದಿಂದ, ಜನರನ್ನು ಅವರ ಮಾರ್ಗದಲ್ಲಿ ರಕ್ಷಿಸುತ್ತಾ ಜನರಿಗೆ ನಾಯಕರಾಗಿರುವವರು. ಇವರನ್ನು ರಕ್ಷಕರೆನ್ನಬಹುದು.
3) ತಮ್ಮ ಬುದ್ಧಿಶಕ್ತಿಯಿಂದ, ಪ್ರಯತ್ನಗಳಿಂದ, ಸಾಹಸಗಳಿಂದ, ಉತ್ಪಾದನೆಯನ್ನು, ಸಂಪತ್ತನ್ನು ಅಭಿವೃದ್ಧಿಗೊಳಿಸಿ ಜನರಿಗೆ ಸಹಕರಿಸುವವರು. ಇವರನ್ನು ಸಂಪದುತ್ಪಾದಕರೆನ್ನಬಹುದು.
4) ಮೇಲೆ ತಿಳಿಸಿದ ಶಕ್ತಿಯಿಲ್ಲದವರು, ಇತರರಿಗೆ ನೆರವಾಗುತ್ತಾ ಅವರನ್ನು ಅನುಸರಿಸಿಕೊಂಡು ಹೋಗುವವರು. ಇವರನ್ನು ನಿಯುಕ್ತರೆನ್ನಬಹುದು.
ಬೇರೆ ಬೇರೆ ದೇಶಗಳಲ್ಲಿ, ಒಂದೇ ದೇಶದಲ್ಲಿ ಬೇರೆ ಬೇರೆ ಪಕ್ಷಗಳಲ್ಲಿ, ಬೇರೆ ಬೇರೆ ಮತಗಳಲ್ಲಿ, ಪ್ರಾಂತ್ಯಗಳಲ್ಲಿ, ಭಾಷೆಗಳಲ್ಲಿ ಇರುವ ಅಗ್ರಗಣ್ಯರು. ಅದರಲ್ಲೂ ಮುಖ್ಯವಾಗಿ ಶಿಕ್ಷಕವರ್ಗದಲ್ಲಿರುವವರು, ಬೇರೆ ಬೇರೆ ಮಾರ್ಗಗಳನ್ನು ಅವಲಂಬಿಸಿ ಆತ್ಮಜಾತಿ ದುರಭಿಮಾನವನ್ನು, ಪರದ್ವೇಷವನ್ನು ಹೊಂದಿದವರಾಗಿ ವರ್ತಿಸುತ್ತಿರುವುದೇ ಈ ವಿಜ್ಞಾನಯುಗದಲ್ಲಿನ ನಾನಾ ಕಷ್ಟಗಳಿಗೆ ಕಾರಣ. ಬೇಕಾದಷ್ಟು ವಾಕ್ ಶಕ್ತಿಯಿದ್ದರೂ, ಹೃದಯ ವೈಶಾಲ್ಯವಿಲ್ಲದ, ತಾತ್ಕಾಲಿಕ ಪ್ರಯೋಜನವನ್ನು ಸಾಧಿಸುವ ಅತಿಯಾಸೆಯಿಂದ ಶಾಶ್ವತ ದುಷ್ಪರಿಣಾಮಗಳನ್ನು ಗಮನಿಸಲಾರದ ಅಜ್ಞಾನ, ಸ್ವಾರ್ಥಪರತೆ, ಅರ್ಥಕಾಮದಲ್ಲಿನ ಅತಿಯಾಸಕ್ತಿ ಮತ್ತು ಕೀರ್ತಿಕಾಂಕ್ಷೆ ಮುಂತಾದುವು ಮೇಲೆ ತಿಳಿಸಿದ ನಾಲ್ಕು ವಿಧದವರಲ್ಲೂ ಅಜ್ಞಾನವನ್ನು ತೊಲಗಿಸಿ, ಅರ್ಥಕಾಮದಲ್ಲಿ ಸಂಯಮವನ್ನು ಬೆಳೆಸಿ, ಶಾಶ್ವತ ಪ್ರಯೋಜನದತ್ತ ದೃಷ್ಟಿ ಹರಿಸುವ ವಿಜ್ಞಾನವೇ ಧರ್ಮಶಾಸ್ತ್ರ. ಪ್ರಾಚೀನ ಕಾಲದಲ್ಲಿನ ವಿವಿಧ ದೇಶಗಳ ಧರ್ಮಶಾಸ್ತ್ರಗಳಲ್ಲಿ ಮನುಸ್ಮೃತಿ ಉದಾತ್ತ ಭಾವಗಳಲ್ಲಿ ವಿಚಾರಪರತೆಯಲ್ಲಿ, ಸರ್ವಮಾನವ ಹಿತದೃಷ್ಟಿಯಲ್ಲಿ ಅತಿ ಶ್ರೇಷ್ಠವಾಗಿ ವಿರಾಜಿಸುತ್ತಿದೆ. ಇಂದು ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರರಿಗೆ ಹೇಳಿದ ಧರ್ಮದಲ್ಲಿನ ಮೂಲತತ್ವಗಳನ್ನು ಸಾಲಾಗಿ ಮೇಲೆ ತಿಳಿಸಿದ ನಾಲ್ಕು ವರ್ಗದವರಿಗೆ ಅನ್ವಯಿಸಿಕೊಂಡು ಧರ್ಮವನ್ನು ಬೆಳಸಬೇಕು.
ಧರ್ಮವು ಪ್ರಪಂಚದಲ್ಲಿನ ಎಲ್ಲಾ ಮಾನವರಲ್ಲಿ ವ್ಯಾಪಿಸಬೇಕೆಂಬುದು ಮನುವಿನ ಇಚ್ಛೆ.
ಏತದ್ದೇಶ ಪ್ರಸೂತಸ್ಯ ಸಕಾಶಾದಗ್ರ ಜನ್ಮನಃ ಸ್ವಂ ಸ್ವಂ
ಚರಿತ್ರಂ ಶಿಕ್ಷೇರನ್ ಪೃಥಿವ್ಯಾಂ ಸರ್ವಮಾನವಾಃ.
ಬ್ರಹರ್ಷಿದೇಶದಲ್ಲಿನ ಧರ್ಮಜ್ಞರಾದ ಬ್ರಾಹ್ಮಣರಿಂದ ಪ್ರಪಂಚದಲ್ಲಿನ ಸಮಸ್ತ ಮಾನವರು ಅವರವರ ನಡೆನುಡಿಯನ್ನು ಕಲಿತುಕೊಳ್ಳಬೇಕೆಂದು ಮನುವು ಹೇಳಿದುದರಲ್ಲಿ ವಿಶ್ವಮಾನವ ದೃಷ್ಟಿ ಆತನಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ.
ತಾನು ಹೇಳಬಯಸಿದ ಧರ್ಮವನ್ನು ಮನುವು ಪ್ರಾರಂಭದಲ್ಲೇ ಈ ವಿಧವಾಗಿ ವರ್ಣಿಸಿದ್ದಾನೆ:
ವಿದ್ವದ್ಭಿಃ ಸೇವಿತಃ ಸದ್ಭಿಃ ನಿತ್ಯಮದ್ವೇಷರಾಗಿಭಿಃ!
ಹೃದಯೇನಾಭ್ಯನುಜ್ಞಾತೋಯೋ ಧರ್ಮಸ್ತಂ ನಿಬೋಧತ!!
ಸತ್ಪುರುಷರೂ, ರಾಗದ್ವೇಷವರ್ಜಿತರೂ ಆದ ವಿದ್ವಾಂಸರ ಕೈಯಲ್ಲಿ ಸದಾ ಅನುಷ್ಠಾನಗೊಳಿಸುವ ಅಂತರಾತ್ಮಕ್ಕೆ ಒಪ್ಪುವಂತಹ ಯಾವ ಧರ್ಮವಿದೆಯೋ ಆ ಧರ್ಮವನ್ನು ನೀವು ತಿಳಿಯಿರಿ.
ಇದು ವಿಶ್ವಮಾನವ ಧರ್ಮವಲ್ಲದೆ ಒಂದು ಕೋಮಿಗೆ ಸಂಬಂಧಿಸಿದುದು ಹೇಗಾಗುತ್ತದೆ?
ಅರ್ಥಕಾಮೇಶ್ವಸಕ್ತಾನಾಂ ಧರ್ಮಜ್ಞಾನಂ ವಿಧೀಯತೇ!
ಅರ್ಥಕಾಮಗಳಲ್ಲಿ ಆಸಕ್ತಿಯಿಲ್ಲದವರಿಗೆ ಮಾತ್ರವೇ ಧರ್ಮಜ್ಞಾನದಲ್ಲಿ ಅಧಿಕಾರ. ಮೇಲೆ ಹೇಳಿದ ಶಿಕ್ಷಕವರ್ಗದವರು ಇಂದು ಎಷ್ಟರಮಟ್ಟಿಗೆ ಈ ಗುಣಗಳನ್ನು ಹೊಂದಿದ್ದಾರೆ? ಮೇಲಿನ ಶ್ಲೋಕದಲ್ಲಿ ಹೇಳಿದಂತೆ ಅವರೆಷ್ಟರಮಟ್ಟಿಗಿನ ವಿದ್ವಾಂಸರು? ಎಷ್ಟರಮಟ್ಟಿಗೆ ಪಕ್ಷಪಾತವಿಲ್ಲದವರು? ಎಷ್ಟರಮಟ್ಟಿಗೆ ಪರ ಹಿತಾಸಕ್ತಿ ಹೊಂದಿದ ಸತ್ಪುರುಷರು? ಯಾವ ಬೀಜವನ್ನು ನಾಟಿದರೆ ಆ ಫಲ ಲಭಿಸುವುದಲ್ಲವೇ.
ಸಮ್ಮಾನಾದ್ಬ್ರಾಹ್ಮಣೋ ನಿತ್ಯಂ ಉದ್ವಿಜೇತ ವಿಷಾದಿವ!
ಅಮೃತಸ್ಯೇವಚಾಕಾಂಕ್ಷೇ ದವಮಾನಂಚ ಸರ್ವದಾ!!
ಬ್ರಾಹ್ಮಣನು ಗೌರವವನ್ನು ವಿಷದಂತೆ ನೋಡಬೇಕು. ಅವಮಾನವನ್ನು ಅಮೃದತಂತೆ ಸ್ವೀಕರಿಸಬೇಕು. ಇಂದಿನ ಶಿಕ್ಷಕವರ್ಗಕ್ಕೆ ಕೀರ್ತಿ ಆಕಾಂಕ್ಷೆಗಳಿಲ್ಲವೆ?
ಸರ್ವಶಾಮೇವ ಶೌಚಾನಾಂ ಅರ್ಥಶೌಚಂ ವರಂ ಸ್ಮೃತಂ!
ಯೊರ್ಥೇಶುಚಿಃ ಸಮೃದ್ವಾರಿ ಶುಚಿಃ ಶುಚಿಃ!!
ಎಲ್ಲಾ ಶುಚಿತ್ವಗಳಿಗಿಂತ ಹಣದ ವಿಷಯದಲ್ಲಿನ ಶುಚಿತ್ವವೇ ಶ್ರೇಷ್ಠವಾದುದು. ಆ ಶುಚಿತ್ವವನ್ನು ಹೊಂದಿದವನೇ ಶುಚಿ. ಇಂದಿನ ಮೊದಲ ಮೂರು ವರ್ಗದವರೂ ಈ ವಿಷಯದಲ್ಲಿ ಆತ್ಮಪರೀಕ್ಷೆ ಮಾಡಿಕೊಳ್ಳಬೇಕಲ್ಲವೇ?
ಯೋಸಾಧುಭ್ಯೋರ್ಥಮಾದಾಯ ಸಾಧುಭ್ಯಃ ಸಂಪ್ರಯಚ್ಛತಿ!
ಸಕೃತ್ವಾಪ್ಲವಮಾತ್ಮಾನಂ ಸಂತಾರಯತಿತಾವುಭೌ!!
ಸತ್ಪುರಷರು ಧನವಿಲ್ಲದೆ ಮುಳುಗಿಹೋಗುತ್ತಿದ್ದಾರೆ. ದುಷ್ಟಜನರು ಹಣ ಹೆಚ್ಚಾಗಿ ಮುಳುಗಿಹೋಗುತ್ತಿದ್ದಾರೆ. ಯಾರು ದುಷ್ಟರಿಂದ ಹಣ ಪಡೆದು ಸತ್ಪುರುಷರಿಗೆ ನೀಡುವನೋ ಅವನು ದೋಣಿಯಂತೆ ಬಂದು ಅವರಿಬ್ಬರನ್ನೂ ದಡಕ್ಕೆ ಸೇರಿಸಿದವನಾಗುತ್ತಾನೆ.
ಒಳ್ಳೆಯ ಮತ್ತು ಕೆಟ್ಟ ಸ್ವಭಾವಗಳನ್ನು ಗಮನಿಸದೆ ಕೇವಲ ಅರ್ಥಪ್ರಮಾಣದ ಮೇಲೆ ಸಮಾಜವಾದವನ್ನು ಮಾಡುವವರು ಈ ಶ್ಲೋಕವನ್ನು ಗಮನಿಸಬೇಕಲ್ಲವೇ!
“ ಸಲಿಂಗಂ ಧರ್ಮಕಾರಣಂ“ “ಫಲಂ
ಕತಕವೃಕ್ಷಸ್ಯ ಯದ್ಯಪ್ಯಂಬು ಪ್ರಸಾದಕಂ!
ಸನಾಮಗ್ರಹಣಾದೇವ ತಸ್ಯವಾರಿ ಪ್ರಸೀದತಿ!!”
ರಾಡಿ ನೀರನ್ನು ಶುಭ್ರಗೊಳಿಸುವ ಶಕ್ತಿ “ಚಿಲ್ಲಿ ಎಂಬ ಬೀಜಕ್ಕೆ ಸಾಧ್ಯ.( ಆ ಬೀಜವನ್ನು ಪುಡಿಮಾಡಿ ನೀರಲ್ಲಿ ಕಲಸುವುದು ವಾಡಿಕೆ) ಈ ಶಕ್ತಿ ಈ ಫಲಕ್ಕಿದ್ದರೂ ಸಹ ಆ ಬೀಜವನ್ನು ಹಾಕದೆ ಅದರ ಹೆಸರನ್ನು ಮಾತ್ರ ಜಪಿಸಿದರೆ ನೀರು ಶುಭ್ರವಾದೀತೇ?
ಇಂದಿನ ಮತಾಂಧರು ಕೇವಲ ಬಾಹ್ಯ ಚಿನ್ಹೆಗಳ ಆಧಾರದ ಮೇಲೆ ಮತದ್ವೇಷವನ್ನು ಬಲಪಡಿಸುವುದು ಅಧರ್ಮವೆನ್ನುವುದಕ್ಕೆ ಮೇಲಿನ ಪ್ರಮಾಣವೊಂದೇ ಸಾಲದೇ?
ಅರಕ್ಷಿತಾ ಗೃಹೇವೃದ್ಧಾಃ ಪುರುಷೈರಾಪ್ತ ಕಾರಿಭಿಃ
ಆತ್ಮಾನಮಾತ್ಮಾನಾ ಯಾಸ್ತು ರಕ್ಷೇ ಯುಸ್ತಾಃ ಸುರಕ್ಷಿತಾಃ!!
ಸ್ತ್ರೀಯರನ್ನು ಆಪ್ತರಾದ ಪುರುಷರು ಮನೆಯಿಂದ ಹೊರಗೆ ಹೋಗಗೊಡದೆ ಭದ್ರವಾಗಿ ರಕ್ಷಿಸುತ್ತೆನೆನ್ನುವವರು ನಿಜವಾಗಿಯೂ ರಕ್ಷಿತರಲ್ಲ. ಯಾವ ಹೆಂಗಸರು ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಶಕ್ತಿಯನ್ನು ಪಡೆಯುವರೋ ಅವರೇ ನಿಜವಾಗಿ ಸುರಕ್ಷಿತರು ಎಂದು ಮನುವು ಹೇಳಿದುದರಲ್ಲಿ ಸ್ತ್ರೀಯರು ವಿದ್ಯೆಯನ್ನು ಕಲಿತು, ಜ್ಞಾನವನ್ನು ಹೊಂದಿ, ಇಂದ್ರಿಯನಿಗ್ರಹ ಉಳ್ಳವರಾಗಿ, ಧೈರ್ಯವಂತರಾಗಿದ್ದಲ್ಲಿ ದುಷ್ಟರನ್ನು ತಾವೇ ನಿಗ್ರಹಿಸುವ ಶಕ್ತಿಯುಳ್ಳವರಾಗಬಹುದೆಂದು ತಾನೇ ಇದರ ಅರ್ಥ? ಮನುವು ತಮಗೆ ಅನ್ಯಾಯ ಮಾಡಿದ್ದಾನೆಂದು ಸ್ತೀಯರು ದೂಷಿಸುವುದರಲ್ಲಿ ಅರ್ಥವಿಲ್ಲ.
ತಪೋಬೀಜ ಪ್ರಭಾವೈಸ್ತು ತೇಗಚ್ಛಂತಿ ಯುಗೇ ಯುಗೇ!
ಉತ್ಕರ್ಷಂಚಾಪಕರ್ವಂಚ ಮನುಷ್ಯೇಷ್ಟಿಹ ಜನ್ಮತಃ!!
ಯುಗಯುಗದಲ್ಲೂ ಅಂದರೆ ಉತ್ತಮ ಗುಣ ಮತ್ತು ಶಕ್ತಿಯುಳ್ಳವರಿಗೂ ಅಶಕ್ತರಿಗೂ ಸಹವಾಸ, ವಿವಾಹವೆಂಬ ಸಂಪರ್ಕ ಏರ್ಪಟ್ಟಾಗಲೆಲ್ಲಾ ತಪಸ್ಸು ಅಂದರೆ ನಿಯಮಾನುಷ್ಠಾನ ಮಾಡದೆ ಬಿಟ್ಟು, ಉತ್ತಮಬೀಜವೆಂದಲ್ಲದೆ ಅಧಮಬೀಜದಲ್ಲಿ ನಾಲಕ್ಕು ವರ್ಣದವರೂ, ಕೆಳಗಿನ ವರ್ಣದವರು ಮೇಲಿನ ವರ್ಣಕ್ಕೆ ಹೋಗುವುದೂ ಮತ್ತು ಮೇಲಿನ ವರ್ಣದವರು ಕೆಳಗಿನ ವರ್ಣಕ್ಕೆ ಇಳಿಯುವುದೂ ಜರುಗುತ್ತಲೇ ಇರುತ್ತದೆ.
ಶೂದ್ರೋ ಬ್ರಾಹ್ಮಣತಾಮೇತಿ ಬ್ರಾಹ್ಮಣಶ್ಚೈತಿ ಶೂದ್ರತಾಂ
ಕ್ಷತ್ರಿಯಾ ಜ್ಞಾತಮೇವಂತು ವಿದ್ಯಾದ್ವೈಶ್ಯಾಥೈವಚ!!
ವಿವಾಹಗಳಲ್ಲಿ ಅನುಲೋಮ ವಿವಾಹದಿಂದ ಉತ್ತಮ ಬೀಜ ಪ್ರಭಾವದಿಂದ ಕೆಲವು ತಲೆಮಾರುಗಳಿಗೆ ಶೂದ್ರಗುಣಗಳೂ ಹೋಗಿ ಬ್ರಾಹ್ಮಣಗುಣಗಳು ಬರುವವು. ಇಲ್ಲವೇ ಕ್ಷತ್ರಿಯ, ವೈಶ್ಯ ಗುಣಗಳು ಬರುವುವು. ವಿಲೋಮ ವಿವಾಹದಿಂದ ಇದಕ್ಕೆ ವಿರುದ್ಧ ಗುಣಗಳು ಬರುವುವು.
ಸಹವಾಸ, ಜ್ಞಾನಪ್ರಸಾರ, ಆಚಾರಶುದ್ಧಿ, ಪ್ರಯತ್ನ, ಬೀಜ ಇವುಗಳಿಂದ ಮನುಷ್ಯರು ಉತ್ತಮತ್ವವನ್ನು, ನೀಚತ್ವವನ್ನು ಹೊಂದುತ್ತಿದ್ದರೆಂಬುದು ವೈಜ್ಞಾನಿಕ ಸತ್ಯವಲ್ಲವೇ?
ಭುಕ್ತವತ್ವ್ಯಥ ವಿಪ್ರೇಷುಸ್ವೇಷು ಭೃತ್ಯೇಷು ಚೈವಹಿ!
ಭುಂಜೀಯಾತಾಂತತಃ ಪಶ್ಚಾದವಶಿಷ್ಟಂ ತುದಂಪತೀ!!
ಮೊದಲ ಮೂರು ವರ್ಣದವರು, ಪ್ರತಿದಿನವೂ ಮನೆಗೆ ಬಂದ ಮೊದಲ ವರ್ಣದವರಿಗೆ ಮೊದಲು ಅನ್ನವನ್ನಿಡಬೇಕು. ತರುವಾಯ ಮನೆಗೆ ಬಂದ ಇತರರಿಗೂ, ತಮ್ಮ ಮನೆಯವರಿಗೂ, ಸೇವಕರಿಗೂ ಎಲ್ಲರಿಗೂ ಅನ್ನವಿಟ್ಟು ನಂತರ ಮನೆ ಯಜಮಾನ ಮತ್ತು ಅವನ ಹೆಂಡತಿ ಉಳಿದ ಅನ್ನವನ್ನು ಉಣ್ಣಬೇಕು.
ಈ ವ್ರತವೊಂದನ್ನು ಇಂದು ಮೊದಲ ಮೂರು ವರ್ಗದವರು ಆಚರಿಸಿದರೆ ಸಾಕು. ಇಂದು ತಿನ್ನಲಿಕ್ಕೆ ಇಲ್ಲದೆ ಒಣಗಿ ಹೋಗುತ್ತಿರುವ ನಿರ್ಗತಿಕರಾದ ಸ್ತ್ರೀ, ಪುರುಷ, ಬಾಲರಾದಿಯಾಗಿ ಎಲ್ಲರಿಗೂ ಕಷ್ಟ ತಪ್ಪುತ್ತದೆ. ಇದನ್ನು ಮಾಡದೆ ದೇವಾಲಯಗಳಲ್ಲಿ, ಚರ್ಚುಗಳಲ್ಲಿ ಮಸೀದಿಗಳಲ್ಲಿ ದೇವರನ್ನು ಹುಡುಕಿದರೆ ಕಾಣುವನೇ?
ಈ ವಿಜ್ಞಾನಯುಗದಲ್ಲಿ ಯುದ್ಧಧರ್ಮವನ್ನು ಬಿಡಲಾರದ ಮಾನವರು ದಾನವರಿಗಿಂತ ಹೀನರಾಗುವುದಿಲ್ಲವೇ?
ಅಹಿಂಸಾ ಸತ್ಯಮಸ್ತೇಯಂ ಶೌಚಮಿಂದ್ರಿಯನಿಗ್ರಹಃ!
ಏತಂ ಸಾಮಾಸಿಕಂ ಧರ್ಮಂ ಚಾತುರ್ವವರ್ಣ್ಯೇಬ್ರವೀನ್ಮನುಃ!!
ಅಹಿಂಸೆ, ಸತ್ಯ, ಕಳ್ಳತನ ಮಾಡದಿರುವುದು, ಬಾಹ್ಯಾ, ಅಭ್ಯಂತರ ಅರ್ಥಶುಚಿತ್ವ, ಇಂದ್ರಿಯನಿಗ್ರಹ, ಇವು ವರ್ಣಗಳ ರೂಪದಲ್ಲಿರುವ ಸಮಸ್ತ ಮಾನವರಿಗೂ ಸಾಮಾನ್ಯ ಧರ್ಮ.
ಸಂಗ್ರಹ: ಸಿರಿವರಂ ರಂಗನಾಥರಾವ್
ತೆಲುಗಿನಿಂದ ಕನ್ನಡಕ್ಕೆ : ಲಂಕಾ ರಾಧಾಕೃಷ್ಣ.