ರಜೋಗುಣದ ರಾದ್ಧಾಂತ
(ದಿನಾಂಕ ದಿಸೆಂಬರ್ 1991 ಧರ್ಮಪ್ರಭ ಮಾಸ ಪತ್ರಿಕೆಯಲ್ಲಿ ಪ್ರಕಟಿಸಲಾಗಿದ್ದ ಲೇಖನ)
ಮತ ಕಲಹಗಳ ವಿಚಾರವಾಗಿ ಇತ್ತೀಚೆಗೆ ಬೆಂಗಳೂರು ದೂರದರ್ಶನದಲ್ಲಿ ಪ್ರಸಾರವಾದ ಕಾರ್ಯಕ್ರಮವು ನಿಜಕ್ಕೂ ವಿಚಾರಾತ್ಮಕವಾಗಿಯು ವಿಚಾರಪ್ರಚೋದಕವಾಗಿಯೂ ಇತ್ತು. ಆ ಕಾರ್ಯಕ್ರಮದಲ್ಲಿ ಆಟೋರಿಕ್ಷಾ ಚಾಲಕರು ಮೊದಲಾಗಿ ಅನೇಕ ಸಾಮಾನ್ಯ ಸ್ತ್ರೀ ಪುರುಷರ ಅಭಿಪ್ರಾಯಗಳನ್ನು ತೋರಿಸಿದ್ದು ನಿಜಕ್ಕೂ ಈ ಪಿಡುಗಿನ ವಿಶ್ಲೇಷಣಾತ್ಮಕ ಪ್ರದಾನವಾಗಿತ್ತು. ಈ ಪ್ರದರ್ಶನದಲ್ಲಿ ಕಾಣಿಸಿಕೊಂಡವರಲ್ಲಿ ಒಬ್ಬಿಬ್ಬರನ್ನು ಬಿಟ್ಟರೆ ಉಳಿದವರೆಲ್ಲರೂ ಅವಿದ್ಯಾವಂತರೇ. ವಿದ್ಯಾವಂತರ ಅಭಿಪ್ರಾಯಗಳನ್ನು ನಾವು ಪತ್ರಿಕೆಗಳಲ್ಲಿ ಹೇರಳವಾಗಿ ನೋಡುತ್ತಿದ್ದೇವೆ. ಅನೇಕ ಜನ ಜ್ಞಾನಿಗಳೂ, ವಿಜ್ಞಾನಿಗಳೂ, ಏನೂ ಹೇಳದೆ ಸುಮ್ಮನಿದ್ದಾರೆ. ಈ ವಿಷಯದಲ್ಲಿ ಹೆಚ್ಚು ಕೋಲಾಹಲ ಮಾಡುತ್ತಿರುವವರು ರಾಜಕೀಯ ಮುಖಂಡರು. ಇವರ ಭಾವನಾ ತರಂಗಗಳಿಗೆ ಸರಿಯಾಗಿ ಭಿನ್ನ ಭಿನ್ನ ಧೋರಣೆಗಳ ಪತ್ರಿಕೆಗಳು ತಾಳಹಾಕುವುದೂ, ಆಯಾ ಪಕ್ಷಗಳ ಸೈನಿಕರಾದ ಪುಂಡರೂ ಪುಢಾರಿಗಳೂ ಅದಕ್ಕೆ ಸರಿಯಾಗಿ ಕುಣಿಯುವುದೂ ನಡೆಯುತ್ತಿದೆ. ಈ ಕುಣಿತವು ಪೌರಾಣಿಕ ರಾಕ್ಷಸ ಪೈಶಾಚಿಕತೆಗಳನ್ನು ಮೀರಿರುವ ಮಾಡರ್ನ್ ವೈನಾಶಿಕತೆಯ ರುದ್ರಭೀಕರ ಸ್ವರೂಪ ತಳೆದಿರುತ್ತದೆ. ಈ ಕುಣಿತದ ಬಾಂಬಿನ ಸ್ಫೋಟನಕ್ಕೆ ಬೇಕಾಗಿರುವುದು ಸ್ವಲ್ಪ ವಿದ್ಯುಚ್ಛಕ್ತಿ ಮತ್ತು ತಂತಿಗಳು ಮತ್ತು ಸ್ವಿಚ್ಚು ಅಷ್ಟೇ. ಇವು ಮತದ ಅಂಗಡಿಯದಾಗಬಹುದು, ಜಾತಿಯ ಅಂಗಡಿಯದಾಗಬಹುದು, ಪ್ರಾಂತದ ಅಂಗಡಿಯದಾಗಬಹುದು. ಈ ಬಾಂಬುಗಳನ್ನಿಟ್ಟು ಸ್ಪೋಟನೆ ಮಾಡುತ್ತ ತಮ್ಮ ಶಕ್ತಿಯನ್ನು ಪ್ರದರ್ಸಿಸಿ ಜನರ ನಾಯಕತ್ವವನ್ನು ಪಡೆಯುವ ಕನಸನ್ನು ಕಾಣುತ್ತಿರುವುದು ಇಂದಿನ ರಾಜಕೀಯಗಳ ಧೋರಣೆ ಆಗಿದೆ. ಇದನ್ನು ಸರಿಪಡಿಸಲು ನಿಧಾನವಾದರೂ ಫಲಪ್ರದವಾದ ಮಾರ್ಗ ಒಂದೇ ಒಂದು. ಅದು ಜನರ ಗುಣವನ್ನು ಸರಿಯಾದ ಮಾರ್ಗದಲ್ಲಿ ಬೆಳೆಸುವುದು. ಕೇವಲ ವಿದ್ಯಾಭಿವೃದ್ಧಿ ಅಲ್ಲ.
ಮನುಷ್ಯನ ಗುಣಗಳನ್ನು ಜ್ಞಾನಿಗಳು ಸತ್ವ, ರಜ ಮತ್ತು ತಮ ಎಂಬ ಮೂರು ವಿಧಗಳಾಗಿ ವಿಂಗಡಿಸಿರುತ್ತಾರೆ. ಮತಕಲಹಗಳಿಗೆ ಕೇವಲ ಒಂದು ನಿಮಿತ್ತ. ನಿಜವಾದ ಕಾರಣ ಕಾಮ ಕ್ರೋಧಗಳು. ಇವು ರಜೋಗುಣದಿಂದ ಹುಟ್ಟುವವು.
ಕಾಮ ಏಷ ಕ್ರೋಧ ಏಷ ರಜೋಗುಣ ಸಮುದ್ಭವ
– ಗೀತೆ
ಅವಿದ್ಯಾವಂತರು, ವಿದ್ಯಾವಂತರು, ಪೂರ್ಣ ವಿದ್ಯಾವಂತರು ಎಂಬಿವರಲ್ಲಿ ಮತಕಲಹಗಳಿಗೆ ಕಾರಣ (ಸ್ವಿಚ್ಚಿನಂತಿರುವವರು) ಅವಿದ್ಯಾವಂತರಲ್ಲ. ಪೂರ್ಣ ವಿದ್ಯಾವಂತರೂ ಅಲ್ಲ. ತಮೋಗುಣದವರೂ ಅಲ್ಲ. ಸತ್ವಗುಣದವರೂ ಅಲ್ಲ. ಕೇವಲ ರಜೋಗುಣದ ವಿದ್ಯಾವಂತರೇ ಇದಕ್ಕೆ ಕಾರಣ. ಈ ಸಮಸ್ಯೆ ಕೇವಲ ಬುದ್ಧಿವಾದಗಳಿಗಿಂತಲೂ ಚರ್ಚೆಗಳಿಂದಲೂ ಬಗೆಹರಿಯುವುದಿಲ್ಲ. ರಾಮಜನ್ಮಭೂಮಿ ವಿವಾದವಾಗಲೀ ಮತ್ತಾವ ವಿವಾದವೇ ಆಗಲಿ ಪರಿಹರಿಸಬೇಕೆಂಬ ಧೃಢ ನಿಶ್ಚಯವಿದ್ದು, ಸಂಬಂಧಪಟ್ಟವರೆಲ್ಲರೂ ಎಲ್ಲರ ಒಟ್ಟು ಹಿತಕ್ಕೆ ಯಾವುದು ಒಳ್ಳೆಯದೆಂದು ತಾಳ್ಮೆಯಿಂದ ಸತ್ವಗುಣದಿಂದ ಆಲೋಚಿಸಿ ಚರ್ಚಿಸಿದರೆ ಎಲ್ಲಾ ಸಮಸ್ಯೆಗಳೂ ಪರಿಹಾರವಾಗುತ್ತದೆ. ತಮ್ಮ ಮಾತೇ ಗೆಲ್ಲಬೇಕು. ತಾವು ಕಿಂಚಿತ್ತೂ ಸೋಲಬಾರದು ಎಂಬ ಹಠದಿಂದ ಮುಂದುವರಿದರೆ ಎಷ್ಟು ವರ್ಷಗಳಾದರೂ ಬಗೆಹರೆಯುವುದಿಲ್ಲ. ಹಠ ಸಂಕುಚಿತ ದೃಷ್ಟಿಯಿಂದ ಬರುತ್ತದೆ. ಕೊಟ್ಟು ತೆಗೆದುಕೊಳ್ಳುವ ಬುದ್ಧಿ ವಿಶಾಲದೃಷ್ಟಿಯಿಂದ ಬರುತ್ತದೆ. ಸಂಕುಚಿತ ದೃಷ್ಟಿಗೆ ಕಾರಣ ತಾತ್ಕಾಲಿಕ ಪ್ರಯೋಜನದ ಕಡೆಯ ಅತಿ ಕಾಮ. ಇದೇ ರಜೋಗುಣ. ವಿಶಾಲ ದೃಷ್ಟಿಗೆ ಕಾರಣ ಶಾಶ್ವತ ಪ್ರಯೋಜನಕ್ಕಾಗಿ ತಾತ್ಕಾಲಿಕ ಪ್ರಯೋಜನವನ್ನು ಸಹ ಬಿಡಲು ಸಿದ್ಧವಾಗಿರುವ ಸಂಯಮದ ಸತ್ವಗುಣ.
ತಮೋಗುಣದಿಂದ ಮತ್ತು ರಜೋಗುಣದಿಂದ ಸತ್ವಗುಣಕ್ಕೆ ಜನರೆಲ್ಲರೂ ಹೋಗುವ ವೈಜ್ಞಾನಿಕ ಯೋಜನೆಗಳನ್ನು ಹಾಕಿಕೊಳ್ಳುವುದೊಂದೇ ಎಲ್ಲಾ ರಾಷ್ಟಗಳಿಗೆ ಹಿತಕರವಾದುದು. ಇದಕ್ಕೆ ಪ್ರಪಂಚದ ರಾಷ್ಟಗಳು ಆದ್ಯತೆಯನ್ನು ಕೊಡಬೇಕು.
ಲಂಕಾ ಕೃಷ್ಣಮೂರ್ತಿ
(ಸಹಾಯಕ ಸಂಪಾದಕರು ಧರ್ಮಪ್ರಭ)