Article of the Month May 2017
ಹಿಂದಿನ ಸಂಚಿಕೆಯಿಂದ ಮುಂದುವರಿಯುತ್ತಿದೆ )
ಧರ್ಮದ ಬೀಜಾಕ್ಷರಗಳು
2 – ದಾನ
ಅರ್ಥಶೌಚ
–ಲಂಕಾ ಕೃಷ್ಣ ಮೂರ್ತಿ
3) ಬೇರೆ ಬೇರೆ ವೃತ್ತಿಗಳಿಂದ ಬರುವ ಆದಾಯಗಳಲ್ಲಿ ತಾರತಮ್ಯ-
(ಮುಂದುವರೆದಿದೆ)
ಯಾವ ವರ್ಣದವರು ಅವರ ವೃತ್ತಿಯಿಂದ ಎಷ್ಟು ಹಣ ಸಂಪಾದಿಸಬಹುದು? ಭೋಗಮಯವಾದ ಜೀವನವನ್ನು ನಡೆಸಬಹುದೇ? ಧನವನ್ನು ಹೆಚ್ಚಾಗಿ ಕೂಡಿಡಬಹುದೇ? ಹೆಚ್ಚಾಗಿರುವ ಧನವನ್ನು ಏನುಮಾಡಬೇಕು? ಧನದಿಂದ ಗೌರವ ಪಡೆಯಲು ಅರ್ಹತೆ ಇದೆಯೇ? ಇವೇ ಮೊದಲಾದ ಮುಖ್ಯವಾದ ಪ್ರಶ್ನೆಗಳಿಗೆ ಧರ್ಮಶಾಸ್ತ್ರ ಏನು ಉತ್ತರ ಕೊಟ್ಟಿದೆ ಎಂಬುದನ್ನು ಪರಿಶೀಲಿಸೋಣ.
ಮನುಸ್ಮೃತಿಯಲ್ಲಿ ಪ್ರಾರಂಭದಲ್ಲೇ “ ದಾನಮೇಕಂ ಕಲೌಯುಗೇ” ಎಂದರೆ ಕಲಿಯುಗದಲ್ಲಿ ದಾನ ( ಅಂದರೆ ಪರೋಪಕಾರವೇ) ಶ್ರೇಷ್ಠವಾದ ಧರ್ಮ ಎಂದು ಹೇಳಿರುವುದನ್ನು ಈ ಸಂದರ್ಭದಲ್ಲಿ ಮುಖ್ಯವಾಗಿ ಗಮನಿಸಬೇಕಾಗಿದೆ. ಧನ ಹೆಚ್ಚಾಗಿ ಒದಗಿ ಬಂದರೆ ಅದರಿಂದ ಭೋಗಮಯವಾದ ಜೀವನವನ್ನು ನಡೆಸದೆ ಅದನ್ನು ಅರ್ಹರಾದ ನಿರ್ಧನರಿಗೆ ದಾನ ಮಾಡಬೇಕು ಎಂಬುದು ಧರ್ಮದ ಕಹಳೆಯ ಕೂಗು.
“ ಸರ್ವಸ್ಯಾಸ್ಯತುಸರ್ಗಸ್ಯ ಗುಪ್ತ್ಯರ್ಥಂ” ಎಂದರೆ ಈ ಸೃಷ್ಟಿಯಲ್ಲಿನ ಎಲ್ಲಾ ಜೀವಿಗಳ ರಕ್ಷಣೆ ಮತ್ತು ಹಿತಕ್ಕಾಗಿ ನಾಲ್ಕು ವರ್ಣದವರು ಮಾಡಬೇಕಾದ ಕೆಲಸಗಳನ್ನು ಭಗವಂತನು ಏರ್ಪಡಿಸಿದ್ದಾನೆ ಎಂದು ಮನುಸ್ಮೃತಿಯು ಹೇಳುವುದರಿಂದ ಒಬ್ಬನು ತನ್ನ ಶಕ್ತಿಯಿಂದ ಇತರರನ್ನು ಶೋಷಣೆ ಮಾಡುವುದನ್ನು ಧರ್ಮಶಾಸ್ತ್ರ ಬಹಿಷ್ಕರಿಸಿದೆಯೆಂದು ತಿಳಿಯುತ್ತದೆ. ಅವರವರಲ್ಲಿ ಸ್ವಭಾವತಃ ಇರುವ ಗುಣಶಕ್ತಿಗಳನ್ನು ಉಳಿಸಿಕೊಂಡು ಬೆಳೆಸಿಕೊಂಡು ಆಯಾ ವರ್ಣದವರು ಸ್ವಕರ್ಮದಿಂದ ಸಮಾಜ ಸೇವೆಯನ್ನು ಮಾಡಬೇಕೆಂಬುದೇ ಧರ್ಮದ ಉದ್ದೇಶ. “ ಸ್ವಕರ್ಮಣಾತಮಭ್ಯರ್ಚ್ಯ” ಎಂಬ ಗೀತಾವಾಕ್ಯವು ಇದೇ ದೇವರ ಸೇವೆ ಎಂದು ತಿಳಿಸುತ್ತದೆ. ಹೀಗಿರುವಾಗ ಸಬಲರು ದುರ್ಬಲರನ್ನು ಆರ್ಥಿಕವಾಗಿ ಶೋಷಣೆ ಮಾಡುವುದಕ್ಕೆ ಧರ್ಮ ಶಾಸ್ತ್ರದಲ್ಲಿ ಸ್ಥಾನವೇ ಇಲ್ಲ.
ಬ್ರಾಹ್ಮಣರು ಎಷ್ಟು ಧನ ಸಂಪಾದಿಸಬಹುದು? ಎಂಬುದಾಗಿ ಮನುಸ್ಮೃತಿಯು ಹೀಗೆ ಬೋಧಿಸುತ್ತದೆ. ಜೀವನಯಾತ್ರೆಯನ್ನು ಮುಂದೆ ಸಾಗಿಸುವುದಕ್ಕೆ ಎಷ್ಟು ಬೇಕೋ ಅಷ್ಟು ಮಾತ್ರ ಧನವನ್ನು ಸಂಪಾದಿಸಬೇಕು. ‘ತಿಲೋಂಛವೃತ್ತಿ’ ಅಂದರೆ ಗದ್ದೆಯ ಬೆಳೆಕೊಯ್ದು ಯಾರೂ ಹೆಕ್ಕದೆ ಬಿಟ್ಟ ಧಾನ್ಯದ ಕಾಲನ್ನು ಅಥವಾ ತೆನೆಯನ್ನು ಹೆಕ್ಕಿ ಅದನ್ನು ತಿಂದು ಜೀವಿಸುವುದು ಬ್ರಾಹ್ಮಣನಿಗೆ ಅತಿ ಶ್ರೇಷ್ಠವಾದ ವೃತ್ತಿ. ಅದರಿಂದ ಜೀವಿಸಲು ಸಾಧ್ಯವಾಗದಿದ್ದರೆ, ತಾನು ಯಾಚಿಸದೆ ಸತ್ಪುರಷರು ಕೊಟ್ಟ ದಾನದಿಂದ ಜೀವಿಸಬೇಕು. ಅದರಿಂದಲೂ ಜೀವನ ನಡೆಯದಿದ್ದರೆ ಸತ್ಪುರುಷರನ್ನು ಯಾಚಿಸಿ ಜೀವಿಸಬಹುದು ಜೀವನ ನಡೆಯದಿದ್ದರೆ ಆರಂಭಮಾಡುವುದರಿಂದ ಅದರಿಂದಲೂ ಆಗದಿದ್ದರೆ ವ್ಯಾಪಾರಮಾಡುವುದರಿಂದ ಜೀವಿಸಬಹುದೆಂದು ಸ್ಮೃತಿ ಹೇಳುತ್ತದೆ. ಸಂಪಾದಿಸಿದ್ದನ್ನು ಸಾಧ್ಯವಾದಷ್ಟೂ ಧರ್ಮಕ್ಕೆ ಖರ್ಚು ಮಾಡಬೇಕು. ಕೂಡಿಡುವರಿಗಿಂತ ಅಶ್ವಸ್ತನನು ( ನಾಳೆಗೆ ಎನೂ ಇಟ್ಟುಕೊಳ್ಳದವನು) ಶ್ರೇಷ್ಠ ಬ್ರಾಹ್ಮಣನು.
ಆದಾನ ನಿತ್ಯಾಚ್ಚಾದಾತುರಾಹರೇದ ಪ್ರಯಚ್ಚತಃ!
ತಥಾ ಯಶೋಯಪ್ರಥತೇ ಧರ್ಮಶ್ಚೈವ ಪ್ರವರ್ಥತೇ!!
ಅಂದರೆ ಯಾವ ಬ್ರಾಹ್ಮಣನು ಯಾವಾಗಲೂ ದಾನವನ್ನು ತೆಗೆದುಕೊಳ್ಳುವುದೇ ಹೊರತು ತಾನು ದಾನ ಮಾಡುವುದಿಲ್ಲವೋ ಅಂತಹವನು ತನಗಿರುವ ಹೆಚ್ಚಾದ ಧನವನ್ನು ರಾನಿಗೆ ಕೊಡದಿದ್ದರೆ ರಾಜನು ಅದನ್ನು ಬಲಾತ್ಕಾರದಿಂದ ತೆಗೆದುಕೊಂಡು ಧರ್ಮಕಾರ್ಯಕ್ಕೆ ವಿನಿಯೋಗಿಸಬೇಕು. ಇದರಿಂದ ಆ ರಾಜನ ಕೀರ್ತಿ ಹೆಚ್ಚುತ್ತದೆ. ಧರ್ಮವು ಬೆಳೆಯುತ್ತದೆ. ಎಂದು ಮನುಸ್ಮೃತಿಯು ಹೇಳುತ್ತಿದೆ.
ಬ್ರಾಹ್ಮಣರಲ್ಲಿ ಜ್ಞಾನ ಹೆಚ್ಚಾಗಿ ಉಳ್ಳವನಿಗೆ ಗೌರವವೇ ಹೊರತು ಧನಿಕನಿಗಲ್ಲ.
ಕ್ಷತ್ರಿಯರಲ್ಲಿ ವೀರ್ಯ ಹೆಚ್ಚಾಗಿರುವವನಿಗೆ ಗೌರವ. ಕ್ಷತ್ರಿಯರು ಇಂದ್ರಿಯನಿಗ್ರಹವುಳ್ಳವರಾಗಿರಬೇಕೆಂದು ಮನು ಒತ್ತಿ ಒತ್ತಿ ಹೇಳಿದ್ದಾನೆ. ಅಲ್ಲದೆ ತನ್ನ ಧರ್ಮವಾದ ದುಷ್ಟ ಶಿಕ್ಷಣ ಶಿಷ್ಟ ರಕ್ಷಣವನ್ನು ಮಾಡುವ ರಾಜನು ದರಿದ್ರನಾಗಿದ್ದರೂ ಕೀರ್ತಿವಂತನಾಗುತ್ತಾನೆಂದು ಮನುಸ್ಮೃತಿ ಹೇಳುತ್ತದೆ.
ಮನುವಿನ ಈ ಮುಂದಿನ ಶ್ಲೋಕದಂತಹುದನ್ನು ನಾನಿನ್ನೆಲ್ಲಯೂ ನೋಡಲಿಲ್ಲ.
ಏವಂ ವೃತ್ತಸ್ಯ ನೃಪತೇ ಶಿಲೋಂ ಛೇನಾಪಿ
ಜೀವತಃ!
ವಿಸ್ತೀರ್ಯತೇ ಯಶೋಲೋಕೇ ತೈಲಬಿಂದು
ರಿವಾಂಭಸಿ!!
ಅಂದರೆ ನಿಷ್ಠಾವಂತನಾಗಿ ದುಷ್ಟ ಶಿಕ್ಷಣ ಶಿಷ್ಟಪರಿಪಾಲನೆ ಮಾಡುತ್ತಿರುವ ರಾಜನು ದರಿದ್ರನಾಗಿ ತಾನು ಜೀವಿಸಿರಲು ಶಿಲೋಂಛವೃತ್ತಿಗಳನ್ನು ಅವಲಂಬಿಸಿದ್ದರೂ ಚಿಂತೆಯಿಲ್ಲ. ಅವನ ಕೀರ್ತಿ ನೀರಿನಲ್ಲಿ ಬಿದ್ದ ಎಣ್ಣೆಯಂತೆ ವಿಸ್ತರಿಸಬಹುದು.
ಚರಿತ್ರೆಯಲ್ಲಿ, ಕಾವ್ಯಗಳಲ್ಲಿ, ಕಥೆಗಳಲ್ಲಿ ಬರುವ ರಾಜರ ವೈಭವಯುತವಾದ ಜೀವನವೇ ಜನರ ಮನಸ್ಸಿನಲ್ಲಿ ಹತ್ತಿಕೊಂಡು ಹೋಗಿದೆ. ಒಂದು ಕಡೆ ಒಬ್ಬ ಮಾನವನು ತನ್ನ ಶಕ್ತಿಯಿಂದ ಬೇಕಾದಷ್ಟು ಸಂಪಾದಿಸಿ ಸ್ವರ್ಗಸುಖಗಳನ್ನನುಭವಿಸುತ್ತಿದ್ದರೆ ಇನ್ನೊಂದು ಕಡೆ ದಲಿತರೂ, ಅಭಾಗಿಗಳೂ ಅನಿಕೃಷ್ಟವಾಗಿ ಜೀವಿಸುತ್ತಿರುವುದು ಚರಿತ್ರೆಯ ತುಂಬಾ ನೋಡುತ್ತಿದ್ದೇವೆ. ಇದೇ ಮಾನವರ ಜೀವನ ಪದ್ಧತಿ ಎಂಬ ಒಂದು ಅಸತ್ಯ ನಂಬಿಕೆ ಜನರಲ್ಲಿ ಬೇರೂರಿಬಿಟ್ಟಿದೆ. ಆದರೆ ಮಹರ್ಷಿಗಳು ಧರ್ಮ ಶಾಸ್ತ್ರಗಳಲ್ಲಿ ಅರ್ಥಕಾಮಗಳನ್ನು ಧರ್ಮದ ಶಕ್ತಿಗೆ ವಶಮಾಡಿಕೊಟ್ಟು ಧರ್ಮದ ಸ್ಥಾನವನ್ನು ಬಹಳ ಎತ್ತರದಲ್ಲಿಟ್ಟಿದ್ದಾರೆ. ಮಹಭಾರತದಲ್ಲಿ ಬರುವ ಅಗಸ್ತ್ಯನ ಕಥೆಯಲ್ಲಿ ಅಗಸ್ತ್ಯನು ಕೆಲವರು ರಾಜರ ಹತ್ತಿರ ಹೋಗಿ ಹಣ ಬೇಡಿದರೆ ಅವರು ತಮ್ಮ ಆದಾಯವ್ಯಯಗಳು ಸಮಾನವಾಗಿರುವುದರಿಂದ ದಾನಮಾಡಲು ತಮ್ಮ ಬಳಿ ಧನವಿಲ್ಲವೆಂದು ಹೇಳುತ್ತಾರೆ.
ಆದುದರಿಂದಲೇ ವೇದಗಳಲ್ಲಿ, ಪುರಾಣಗಳಲ್ಲಿ, ಶಾಸ್ತ್ರಗಳಲ್ಲಿ ಬ್ರಾಹ್ಮಣರನ್ನೂ ಕ್ಷತ್ರಿಯರನ್ನೂ ಅಷ್ಟು ಕೊಂಡಾಡಿರುವುದು, ಗುಣಗಳಲ್ಲಿ ಸದ್ಬ್ರಾಹ್ಮಣರೂ, ಸತ್ ಕ್ಷತ್ರಿಯರೂ ಆದವರು ಇಲ್ಲದ ಈ ಭೂಮಂಡಳದಲ್ಲಿ ಧರ್ಮಕ್ಕೆ ಸ್ಥಾನವೆಲ್ಲಿದೆ? ಆದುದರಿಂದಲೇ ಇಂದು ಹುಲ್ಲಿನಿಂದ ಮುಚ್ಚಲ್ಪಟ್ಟಿರುವ ಭಾವಿಯಂತೆ ಅಪಾಯಕರವಾಗಿರುವ, ಧರ್ಮದ ಹೆಸರಿನಲ್ಲಿನ ಅಧರ್ಮವು, ಎಲ್ಲರನ್ನೂ ವಂಚಿಸುತ್ತಿರುವುದು.
(ಮುಂದಿನ ಸಂಚಿಕೆಯಲ್ಲಿ ಮುಂದುವರೆಯುತ್ತದೆ)